Friday, February 18, 2011

ಎಂದು ಕೊನೆ

          ಅಡಿಗರ ಜನ್ಮದಿನದಂದು ಅವರ ಈ ಕವನ...


               ಎಂದು ಕೊನೆ  ? - ಹಾ - ಎಂದು ಕೊನೆ? 
 ಒಬ್ಬರನೊಬ್ಬರು  ಕೊಂದು ಕಳೆವ ಕೊಲೆ 
 ಹಬ್ಬಕೆ ತಾ ಬರದೇನು ಕೊನೆ?
 ಎಂದು ಕೊನೆ? - ಓ - ಎಂದು ಕೊನೆ ?

               ಯುಗಯುಗದಿಂದಲು ಬಗೆಬಗೆಯಿಂದಲು
 ನಗುವಿನೊಳೂ ಯಾತನೆಯೊಳಗೂ
 ನರನೆದೆಯಾಳವನಳಲಿಪ  ಅಳುಕಿದು ;
 'ಬರದೆ ಕೊನೆ ? - ಇದ -  ಕಿರದೆ ಕೊನೆ !'
   
               ಎನಿಬರೊ ನರವರರೆದ್ದು ಬಂದು ಕಡೆ 
  ಕಡೆದರು ನರನೆದೆಯ;
  ಹಾಲಾಹಲವೇ ಹರಿಯಿತು, ಮೊರೆಯಿತು ;
  ಬಾರದೇನೊ ಅಮೃತ  - ಎಂದಿಗೂ -
  ಬಾರದೇನೋ ಅಮೃತ ?

              ಮುಗಿಲಲಿ ಮೂಡಿದ ಒಲವಿನ ಕನಸು
  ಮನಸಿಗಿಳಿಯಲಿಲ್ಲ - ಇಳಿದರು -  
  ನನಸನಾಳದಲ್ಲ !
  ಅರಿವಿಗೂ ಇರಿವಿಗು ಇರುವೀ ಅಂತರ 
  ಕಳೆಯಲಾರದೇನೋ  - ಎಂದಿಗು -
  ಅಳಿಯಲಾರದೇನೋ !

              ಎದೆಗು ಎದೆಗು ನಡುವಿದೆ ಹಿರಿಗಡಲು ; 
  ಮುಟ್ಟಲಾರೆವೇನೋ - ಸೇತುವೆ -
  ಕಟ್ಟಲಾರೆವೇನೋ ! 
  ನಡುವಿನ ತೆರೆಗಳ ಮೊರೆಹವೆ ಮಾನವ
  ಜೀವಗಾನವೇನೋ -  ದೇವನ - 
  ದಿವ್ಯಗಾನವೇನೋ !

              ಒಬ್ಬರನೊಬ್ಬರು ನಂಬುವ ತುಂಬುವ
   ಹಬ್ಬವು ಕಬ್ಬದ ಕಾದಂಬಿನಿಯಲಿ 
   ಮೂಡುವ ಮಸುಳುವ ಮಳೆಬಿಲ್ಲಾಯಿತೆ ?
   ಮೊಳೆಯದೆ ಅದು ಎದೆಯಾಳದಲಿ ? 
   ಬೆಳೆಯದೆ ಅದು ನಮ್ಮೀ ಬಾಳಿನಲಿ ?
  
              ತಿಳಿಯುವ  ಹೃದಯದ ಈ ತಳಮಳಕೆ ,
   ಬೆಳೆಯುವ ಬುದ್ಧಿಯ ಈ ಕಳವಳಕೆ ,
   ಬಲಿಯುವ ನರಕುಲದೀ ಒಳ ರೋಗಕೆ
              ಎಂದು ಕೊನೆ  ? - ಹಾ - ಎಂದು ಕೊನೆ ?
              ಒಬ್ಬರನೊಬ್ಬರು ಕೊಂದು ಕಳೆವ ಕೊಲೆ
   ಹಬ್ಬಕೆ ತಾ ಇರದೇನು ಕೊನೆ ? 
   ಎಂದು ಕೊನೆ ? - ಹಾ - ಎಂದು ಕೊನೆ ?

                       
  





 

1 comment:

ಸಾಗರದಾಚೆಯ ಇಂಚರ said...

Radhika

tumbane chendada saalugalu

ishtaa ayitu

Powered By Blogger

Followers