Monday, November 1, 2010

ನಾನು


  ಕನ್ನಡ ರಾಜ್ಯೋತ್ಸವದಂದು ಎಲ್ಲ ಕನ್ನಡದ ಮನಸ್ಸುಗಳಿಗೆ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಪ್ರೀತಿ ಕೇವಲ ಈ ದಿನಕ್ಕೆ ಮಾತ್ರ ಸೀಮಿತವಾಗಿರದೆ ಸದಾಕಾಲ ಪಸರಿಸುತಿರಲಿ.

೧ 
ವಿಶ್ವ ಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು !
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟ 
ನಿಂತಂಥ ಮೂರ್ತಿ ನಾನು !

 ೨
 ಭಾರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು !
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !

೩ 
 ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು !
ಈ  ಐದು ಐದೆಯರ ಪಂಚಪ್ರಾಣಗಳಾಗಿ 
ಈ ಜೀವ ದೇಹನಿಹನು !

 ೪
ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು !
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ 
ಅಂಬಿಕಾತನಯನಿವನು !  


                                        - ದ. ರಾ. ಬೇಂದ್ರೆ












Friday, August 20, 2010

ಬೇರಿನ ಭದ್ರತೆ

ಸ್ವಂತವಲ್ಲದ ಪರಿಸರದಲ್ಲಿ ಸೌಹಾರ್ದಯುತ ಸಂಬಂಧಗಳ ಬಯಸಿ,
ಮನದ ತುಂಬೆಲ್ಲ ಅದರ ಸೌಗ೦ಧವ ಕಲ್ಪಿಸಿ,
ಕೊನೆಗದು ಕೇವಲ ಕಲ್ಪನೆಯೆಂದು ಅನಿಸಿ,
ಭಾವಬಿ೦ದುಗಳ ಜೋಡಿಸುವ ಹಂಬಲದಲ್ಲಿ
ಜೀವದ ಬೇರನ್ನು  ಅರಸಿ,
ಹೋದೆ ನಾನು ಮತ್ತದೇ ಬಯಕೆಯಲ್ಲಿ...

ಅಂತೂ ಸೌಹಾರ್ದಯುತ ಸಂಬಂಧಗಳ ಕೊಂಡಿ ಸಿಕ್ಕಿತು,.
ಅದೂ ಜೀವದ ಬೇರಿನ ಬುಡದಲ್ಲಿ...
ಕಲ್ಪನೆ, ಅದು ಕಲ್ಪನೆಯಾಗಿ ಉಳಿದಿಲ್ಲ ವಾಸ್ತವತೆಯೊಟ್ಟಿಗೆ ಮಿಳಿತಗೊ೦ಡಿದೆ
 ಭಾವ ಬಿಂದುಗಳ
ಜೋಡಣೆಯ ಕಾರ್ಯದಲಿ ಮಗ್ನಳಾಗಿ ಮನ ಪುಳಕಗೊಂಡಿದೆ ....

Thursday, April 1, 2010

ವಿಮೋಚನೆ

ಬಣ್ಣಗಳನು ನೋಡುವ ಹಂಬಲವಿತ್ತು ನನ್ನಲ್ಲಿ,
ಆದರೆ ಕಣ್ಣಿಗೆ ಪೊರೆ ಬಂದು
ಅವಕಾಶವಂಚಿತಳಾಗಿದ್ದೆ.
ಪೊರೆಯನು ತೆಗೆಯಲು ಕಾತುರಳಾಗಿದ್ದೆ
ಸಹಾಯ ಹಸ್ತಕಾಗಿ ಕಾಯುತಾ
ಆಶಾವಾದಿಯಾಗಿದ್ದೆ.
ಕೊನೆಗೂ ನನ್ನ ನಿರೀಕ್ಷೆ ಫಲಿಸಿತು:
ಆ ಅಮೃತ ಹಸ್ತ ಬಂದು ನನಗೊದಗಿದ್ದ
ತಾತ್ಕಾಲಿಕ ಪೊರೆಯನು
ಶಾಶ್ವತವಾಗಿ ನಾಶ ಮಾಡಿ ಬಣ್ಣದ ಲೋಕಕ್ಕೆ ಕರೆದೊಯ್ಯಿತು.
ಇಂತಹ ಸುಯೋಗವನು ನನ್ನ ಪಾಲಿಗೆ
ಹೊತ್ತು ತಂದ ಆ ಹೃದಯ
ಎಂದಿಗೂ ನನಗೆ ವಿಸ್ಮಯದ ಬಣ್ಣದ
ಲೋಕ...

( ಈ ವಾರದ ಮಣ್ಣಿನ ವಾಸನೆಯಲ್ಲಿ ಪ್ರಕಟವಾದ ಕವನ)
Powered By Blogger

Followers