Tuesday, April 21, 2009

ಹಾರದ ನಿರೀಕ್ಷೆ

ಸಿದ್ಧಪಡಿಸಿಕೊಂಡೆ ಸಡಗರದಿಂದ ಸುಂದರವಾದ ಪದಗಳ
ಮುತ್ತಿನಂತೆ ಪೋಣಿಸಿಟ್ಟುಕೊಂಡೆ

ತೊಡಿಸಿಕೊಳ್ಳಲು ಸಿಗುತ್ತಿಲ್ಲ ನಿನ್ನ ಕೊರಳು
ಅರ್ಥಾತ್ ನನ್ನಿಂದ ಸೃಷ್ಟಿಸಿಕೊಂಡ ಪದಗಳು
ನಿನ್ನ ಕರ್ಣಕ್ಕೆ ತಮ್ಮ ತಲುಪಿಸಿಕೊಳ್ಳಲು ಸಾಧ್ಯವಾಗದೇ;
ಸ್ವಕರುಣೆಯಿಂದ ಸೊರಗುತ್ತಿವೆ ತಮ್ಮಷ್ಟಕ್ಕೆ
ಅವೆಲ್ಲಾ ಕರಗಿ ಹೋಗುವ ಮುನ್ನ ಒಮ್ಮೆ ನೀನೆ ಕರುಣೆ ತೋರಬಾರದೇ...?

ನಿನ್ನ ಕೊರಳ ಮೌನದ ನಕಲಿ ಆಭರಣ ಕಳಚಿ ನಿಲ್ಲು
ಇಲ್ಲಿ ಸಂಭ್ರಮದಿಂದ ಕಾದಿದೆ ಅಸಲಿ ಮಾತಿನ ಮುತ್ತಿನ ಹಾರ

ಕರುಳಿಂದ ಬಂದ ಕೊರಗು, ನೆನಪಿಂದ ಬಂದ ನಲಿವು
ಹಾಗೂ ಇದರ ಅದಲು ಬದಲು ಎಲ್ಲ ಸೇರಿ ಹಾರವಾಗಿದೆ
ಭಾವಗಳೇ ಇದ ಪೋಣಿಸಲು ದಾರವಾಗಿದೆ...

ನಿನ್ನದೇ ಕೊರಳಿಗಾಗಿ ಕಾದುಕೊಂಡಿದೆ ಇನ್ನೂ ತಡಮಾಡಬೇಡ
ದಾರ ಲಡ್ಡಾದೀತೆಂಬ ಭಯ ಶುರುವಾಗಿದೆ!

ಆಭರಣ ಪೆಟ್ಟಿಗೆಯಲ್ಲಿ ಜತನದಿಂದಿರಿಸಿರುವೆ ಹಾರವ
ನಿನ್ನ ಕೊರಳೇ ತಮ್ಮ ಭದ್ರ ಸ್ಥಾನ ಎಂಬ ಭಾವದಲ್ಲಿ ಕಾದಿವೆ ಮಾನವ...

Friday, April 3, 2009

ಶ್ರೀರಾಮ ನವಮಿಯ ದಿವಸ

ಶ್ರೀರಾಮ ನವಮಿಯ ದಿವಸ ಅಡಿಗರ "ಶ್ರೀರಾಮ ನವಮಿಯ ದಿವಸ" ಪದ್ಯ ಇಲ್ಲಿದೆ...ಎಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು



ಶ್ರೀರಾಮ ನವಮಿಯ ದಿವಸ ರಾಮನಾಮಾಮೃತವೆ
ಪಾನಕ,ಪನಿವಾರ, ಕೋಸಂಬರಿ ;
ಕರಬೂಜ ಸಿದ್ದೋಟುಗಳ ಹೋಳು,ಸೀಕರಣೆ ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ ;

ಕಾದು ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ -
ಕುಳಿತ ಮೂಲಾಧಾರ ಜೀವಧಾತು
ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು :
ಮಣ್ಣೊಡೆದು ಹಸುರು ಹೂ ಹುಲ್ಲುಮುಳ್ಳು .

ಮಣ್ಣುಟ್ಟ ಪುಟ್ಟ ಬಿತ್ತಕ್ಕೆ ಮಳೆಹನಿಸೇಕ :
ಅಶ್ವಥ್ಥದ ವಿವರ್ತ ನಿತ್ಯ ಘಟನೆ ;
ಗುಮ್ಮಟಗಿರಿಯ ನೆತ್ತಿಯಲ್ಲಿ ಕಲ್ಲರಳಿದ್ದು
ಕಾರ್ಯ ಕಾರಣದೊಂದಪೂರ್ವ ನಟನೆ .

ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು
ಜೆಟ್ ವಿಮಾನವನೇರಿ ಕೊಂಚ ದೂರ
ತೇಲಿ ಮಣ್ಣಿಗೆ ಮರಳಿ,ರಾಕೆಟ್ಟು ಜಗಿದುಗುಳಿ
ತಿಂಗಳಿಗೆ ಬಡಿವಾಧುನಿಕ ವಿಕಾರ .

ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ್ದ ಕೈ ಕಡೆದ ನೋಟ :

ಕೌಸಲ್ಯೆದಶರಥರ ಪುತ್ರಕಾಮೇಷ್ಟಿಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ
ಆಸ್ಫೋಟಿಸಿತ್ತು ಸಿಡಿತಲೆ ; ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟುನಿಂತ ಘಟನೆ ;

ಬೆಳ್ಳಂಬೆಳಕಿನಲ್ಲಿ ಬಿಳಿಹಾಯಿಗಳ ಪರದಾಟ,
ಹಾಲ್ಗಡಲ ಬಗೆದೊಗೆವ ರಾಜಹಂಸ ;
ಅಂತರಂಗದ ಸುರಳಿ ಬಿಚ್ಚಿ ಸರ್ಚ್ಲೈಟಲ್ಲಿ
ಹೆದ್ದಾರಿ ಹಾಸಿದ್ದ ರಾಮಚರಿತ

ಸಂಕಲ್ಪದಿಂದ ಜಾಗರಣೆ ; ಕತ್ತಲಿನೆದೆಗ
ಕಣೆ;ದಂಡಕಾರಣ್ಯಕ್ಕೆ ಹಗಲ ದೊಣ್ಣೆ;

ಮಣ್ಣಿನಣುಗಿಯ ಸೆಳವಿನಲ್ಲಿ ಲಂಕೆಗೆ ಬೆಂಕಿ;
ಸುಟ್ಟಲ್ಲದೆ ಮುಟ್ಟೆನೆ೦ಬುಡಾಫೆ

ವಿಜೃಂಭಿಸಿತು ರಾಮಬಾಣ ; ನಿಜ, ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ ;
ಕತ್ತರಿಸಿದರೆ ಬೆಳೆವ ; ಬೆಳೆದು ಕತ್ತಿಗೆ ಬರುವ
ಅನಾದಿ; ಕೋದ೦ಡ ದ೦ಡವೂ ಹೀಗೆ ದ೦ಡ ;

ಅಥವಾ ಚಕ್ರಾರಪ೦ಕ್ತಿ ; ಚಕಮಕಿ ಕಲ್ಲನುಜ್ಜುತ್ತ
ಕೂತುಕೊ೦ಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕ೦ಪಿಸುತ್ತ .

ಷಟ್ಚಕ್ರ ರಾಕೆಟ್ಟುಗಳ ಹಂತಹಂತಕ್ಕೆ
ಅಂಚೆ ತಲುಪೀತೆ ಸಹಸ್ರಾರಕೆ?
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ?
Powered By Blogger

Followers