ಅಡಿಗರ ಜನ್ಮದಿನದಂದು ಅವರ ಈ ಕವನ...
ಎಂದು ಕೊನೆ ? - ಹಾ - ಎಂದು ಕೊನೆ?
ಒಬ್ಬರನೊಬ್ಬರು ಕೊಂದು ಕಳೆವ ಕೊಲೆ
ಹಬ್ಬಕೆ ತಾ ಬರದೇನು ಕೊನೆ?
ಎಂದು ಕೊನೆ? - ಓ - ಎಂದು ಕೊನೆ ?
ಯುಗಯುಗದಿಂದಲು ಬಗೆಬಗೆಯಿಂದಲು
ನಗುವಿನೊಳೂ ಯಾತನೆಯೊಳಗೂ
ನರನೆದೆಯಾಳವನಳಲಿಪ ಅಳುಕಿದು ;
'ಬರದೆ ಕೊನೆ ? - ಇದ - ಕಿರದೆ ಕೊನೆ !'
ಎನಿಬರೊ ನರವರರೆದ್ದು ಬಂದು ಕಡೆ
ಕಡೆದರು ನರನೆದೆಯ;
ಹಾಲಾಹಲವೇ ಹರಿಯಿತು, ಮೊರೆಯಿತು ;
ಬಾರದೇನೊ ಅಮೃತ - ಎಂದಿಗೂ -
ಬಾರದೇನೋ ಅಮೃತ ?
ಮುಗಿಲಲಿ ಮೂಡಿದ ಒಲವಿನ ಕನಸು
ಮನಸಿಗಿಳಿಯಲಿಲ್ಲ - ಇಳಿದರು -
ನನಸನಾಳದಲ್ಲ !
ಅರಿವಿಗೂ ಇರಿವಿಗು ಇರುವೀ ಅಂತರ
ಕಳೆಯಲಾರದೇನೋ - ಎಂದಿಗು -
ಅಳಿಯಲಾರದೇನೋ !
ಎದೆಗು ಎದೆಗು ನಡುವಿದೆ ಹಿರಿಗಡಲು ;
ಮುಟ್ಟಲಾರೆವೇನೋ - ಸೇತುವೆ -
ಕಟ್ಟಲಾರೆವೇನೋ !
ನಡುವಿನ ತೆರೆಗಳ ಮೊರೆಹವೆ ಮಾನವ
ಜೀವಗಾನವೇನೋ - ದೇವನ -
ದಿವ್ಯಗಾನವೇನೋ !
ಒಬ್ಬರನೊಬ್ಬರು ನಂಬುವ ತುಂಬುವ
ಹಬ್ಬವು ಕಬ್ಬದ ಕಾದಂಬಿನಿಯಲಿ
ಮೂಡುವ ಮಸುಳುವ ಮಳೆಬಿಲ್ಲಾಯಿತೆ ?
ಮೊಳೆಯದೆ ಅದು ಎದೆಯಾಳದಲಿ ?
ಬೆಳೆಯದೆ ಅದು ನಮ್ಮೀ ಬಾಳಿನಲಿ ?
ತಿಳಿಯುವ ಹೃದಯದ ಈ ತಳಮಳಕೆ ,
ಬೆಳೆಯುವ ಬುದ್ಧಿಯ ಈ ಕಳವಳಕೆ ,
ಬಲಿಯುವ ನರಕುಲದೀ ಒಳ ರೋಗಕೆ
ಎಂದು ಕೊನೆ ? - ಹಾ - ಎಂದು ಕೊನೆ ?
ಒಬ್ಬರನೊಬ್ಬರು ಕೊಂದು ಕಳೆವ ಕೊಲೆ
ಹಬ್ಬಕೆ ತಾ ಇರದೇನು ಕೊನೆ ?
ಎಂದು ಕೊನೆ ? - ಹಾ - ಎಂದು ಕೊನೆ ?
1 comment:
Radhika
tumbane chendada saalugalu
ishtaa ayitu
Post a Comment